ಏನೇ ಕೇಳಿದ್ರೂ ಕೊಡೋಣ ಎಂದ ಹೃದಯವಂತ ಶಂಕರ್ ನಾಗ್ !

 ಏನೇ ಕೇಳಿದ್ರೂ  ಕೊಡೋಣ ಎಂದ  ಹೃದಯವಂತ ಶಂಕರ್ ನಾಗ್ !
==========================================
ಚಿ. ಉದಯಶಂಕರ್  ತನ್ನ ಸಂಭಾವನೆಯಾಗಿ ನಿರ್ಮಾಪಕರು ಕೊಟ್ಟ  ಚೆಕ್ಕುಗಳು  ಬ್ಯಾಂಕಲ್ಲಿ ''ಎಗರಿ''  ವಾಪಸು ಬಂದ ದೊಡ್ಡ ಕಟ್ಟನ್ನು ನೋಡಿ  ''ಇದು ನನ್ನ ಸಂಭಾವನೆ !''ಎಂದು  ವ್ಯಂಗ್ಯ ನಗು ಬೀರುತ್ತಿದ್ದಾಗ  ರಮೇಶ್ ಭಟ್ ಒಳಗೆ ಬರ್ತಾರೆ
ಬಹುಶ: ಅದು ''ರಾಹು'' ಕಾಲ ಆಗಿದ್ದಿರಬೇಕು !!

 ಶಂಕರ್ ನಾಗ್   ತನ್ನ ನಿರ್ದೇಶನದ  ಗೀತಾ ಸಿನಿಮಾ ಮಾಡುವಾಗ  ಇಂತಹ  ಇಮೋಷನಲ್ ಚಿತ್ರಕ್ಕೆ ಹಾಡುಗಳನ್ನು ಬರೆಯೋದು   ಉದಯಶಂಕರ್ ಬಿಟ್ಟರೆ  ಬೇರೆ ಯಾರಿಂದ ಸಾಧ್ಯ? , ಹಾಗಾಗಿ  ಅವರಲ್ಲಿಗೆ ಹೋಗಿ  ಹಾಡುಗಳನ್ನು ಬರೆದು ಕೊಡುತ್ತಾರೋ  ಎಂದು ಕೇಳಿ ಕೊಂಡು ಬರಲು  ರಮೇಶ್ ಭಟ್ ಅವರನ್ನು ಕಳಿಹಿಸುತ್ತಾರೆ !
ರಮೇಶ್ ಭಟ್ ಬಂದವರೇ  ''ಶಂಕ್ರಣ್ಣ  ಗೀತಾ ಚಿತ್ರಕ್ಕೆ ಹಾಡು ಬರೆದು ಕೊಡ್ತೀರಾ  ಕೇಳ್ಕೊಂಡು ಬಾ  ಅಂತ ಕಳ್ಸಿದ್ದಾರೆ ! '' ಅನ್ನುತ್ತಾ  ಉದಯಶಂಕರ್  ಮುಖ ನೋಡಿದ್ರು 

   ''ಊಟಕ್ಕೆ ಬೇಡ ಕಣ್ರೊ ., ನನ್ನ ಮಾತ್ರೆಗಳಿಗಾದ್ರೂ ಸಂಭಾವನೆ ನೀಡಿ!''    ಎಂದು ಮಾರ್ಮಿಕವಾಗಿ  ಸಂಭಾವನೆ ಕೇಳುತ್ತಿದ್ದ  ಉದಯಶಂಕರ್  ಯಾವತ್ತೂ ನಿರ್ಮಾಪಕರಲ್ಲಿ ಸಂಭಾವನೆಗಾಗಿ  ಹಲ್ಲು ಗಿಂಜಿದವರಲ್ಲ, ತಕರಾರು ಎತ್ತಿದವರಲ್ಲ !.
ಸಾಹಿತ್ಯ ಅವರಿಗೆ ಸರಸ್ವತಿಯೇ ಹೊರತು ಲಕ್ಷ್ಮಿಯಂತೆ ಕಂಡೇ  ಇರಲಿಲ್ಲ ! ಅವತ್ತು  ರಮೇಶ್ ಭಟ್ ಬಂದ  ಗಳಿಗೆ  ಬಹುಶ:  ಸರಿ ಇರಲಿಲ್ಲವೊ ಏನೋ ? !  ಎಂದೂ  ತನ್ನ ಸಂಭಾವನೆ ಬಗ್ಗೆ ಕೇಳದ  ಉದಯಶಂಕರ್  ಅವತ್ತು  ಕೇಳಿಯೇ ಬಿಟ್ಟರು !

 ''ಏನ್ ಕೊಡ್ತಾನಂತೆ  ನಿನ್ನಣ್ಣ ?''

ಈ ಪ್ರಶ್ನೆಗೆ ಯಾವ ಪೂರ್ವ ತಯಾರಿ ಇಲ್ಲದೆ  ಬಂದ  ರಮೇಶ್ ಭಟ್  ಒಮ್ಮೆ ತಬ್ಬಿಬ್ಬಾಗಿ    ''ಒಂದು ನಿಮಿಷ  ಬಂದೆ ಇರಿ " ಎಂದು ಸೀದಾ ಹೋಗಿ ಶಂಕರ್ಗೆ ಫೋನಾಯಿಸಿ
 'ಶಂಕ್ರಣ್ಣ  ಏನು ಕೊಡ್ತಾನೆ ನಿನ್ನಣ್ಣ  ಅಂತ ಕೇಳ್ತಿದ್ದಾರೆ ?! ಏನ್ ಹೇಳ್ಲಿ ?!'

 ಹೇಳಿ ಕೇಳಿ ಶಂಕ್ರಣ್ಣ  ಹೃದಯವಂತ!    ಒಂದೇ ಮಾತಲ್ಲಿ ಅಂದ್ರಂತೆ

 ''ಏನು ಕೇಳಿದ್ರೂ ಕೊಡೋಣವಂತೆ   ಹಾಡು ಬರೆಯಲು ಒಪ್ಪಿಕೊಳ್ಳಲು  ಹೇಳು !''

 ರಮೇಶ್ ಭಟ್ ಹಿಂತಿರುಗಿ ಬಂದು  ಶಂಕ್ರಣ್ಣನ  ಮಾತನ್ನು ಉದಯ ಶಂಕರ್ ಅವರಲ್ಲಿ ಹೇಳಿದಾಗ  ಉದಯಶಂಕರ್  ಹೃದಯ ತುಂಬಿ  ಬಂತಂತೆ

 ''ತಗೊಳ್ಳಿ ಪಲ್ಲವಿ ಬರ್ಕೊಳ್ಳಿ  ಚರಣ ಆಮೇಲೆ ಬರ್ದು ಕೊಡ್ತೇನೆ'' ಎಂದು  ಪಲ್ಲವಿ ಹೇಳಿ ಬಿಟ್ರು!

ಅದೇ ಮುಂದೆ   ಗೀತಾ ಸಿನಿಮಾದ  ಅತ್ಯಂತ ಜನಪ್ರಿಯ ಹಾಡಾಯಿತು !

 ''ಏನೇ ಕೇಳು ಕೊಡುವೆ ನಾನು ನಿನಗೀಗ !!''

ಮುಂದೆ   ಈ ಶ್ರೀಮಂತ ಕವಿ  ಹೃದಯವಂತ  ಶಂಕರಣ್ಣ ನನ್ನು  ''ಬೇರೆ ಏನು ಬೇಕು  ನೀನು ಇರುವಾಗ,  ನಿನ್ನ ಜೊತೆಯೇ ಸಾಕು ,ಸವಿ ನುಡಿಯೇ ಸಾಕು,  ಸಾಕು ನಿನ್ನೊಲುಮೆ!!''  ಎಂದು ಹಾಡಿನಲ್ಲಿಯೇ  ಕೃತಜ್ಞತೆ ಬೀರುತ್ತಾರೆ !

ಅಷ್ಟಕ್ಕೇ ನಿಲ್ಲದೆ ಗೀತಾ ಸಿನಿಮಾಕ್ಕೆ   ಕೇಳದೇ  ನಿಮಗೀಗ , ಹಾಡು ಸಂತೋಷಕ್ಕೆ , ನನ್ನ ಜೀವ ನೀನು, ಜೊತೆಯಲಿ , ಜೊತೆಜೊತೆಯಲಿ , ಗೀತಾ  ಹೀಗೆ ಎಲ್ಲ ಆರು ಹಾಡುಗಳನ್ನೂ ಬರೆದುಕೊಟ್ಟು  ಗೆಳೆತನದ  ಸವಿ ಬೀರುತ್ತಾರೆ !

 ಇಂದು ಈ ಇಬ್ಬರು  ಶ್ರೀಮಂತರೂ ನಮ್ಮ ಜೊತೆಯಲ್ಲಿ ಇಲ್ಲ ! ಆದರೂ ಈ ಹಾಡುಗಳನ್ನು   ಕೇಳುವಾಗಲೆಲ್ಲ  ಇಬ್ಬರೂ   ಕನ್ನಡಿಗರ ನರನಾಡಿಯಲ್ಲಿ  ಎಲ್ಲೋ ಜೀವಂತ ಸಂಚರಿಸುತ್ತಿದ್ದಾರೆ  ಅನ್ನಿಸುತ್ತೆ  !!
 ಹ್ಯಾಪಿ  ಬರ್ತ್ ಡೇ  ಮಾಲ್ಗುಡಿ  ಶಂಕ್ರಣ್ಣ !!

Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.